Childhood- ಬಾಲ್ಯ ನಮ್ಮೆಲ್ಲರ ಜೀವನದ ಕಾವ್ಯ – ಬಾಲ್ಯದ ನೆನಪನೇರಿ ಒಂದು ಸವಾರಿ (ಭಾಗ -೧)
ನವಜಾತ ಶಿಶುವು ಜನ್ಮಿಸಿದಾಗ ಅಳುತ್ತದೆ. ಆದರೆ ಆ ಅಳು ಹಲವರ ಮೊಗದಲ್ಲಿ ನಗು ಮೂಡಿಸುತ್ತದೆ. ತಾಯಿ, ದಾದಿ, ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರ ತಂಡ ಈ ಚಮತ್ಕಾರದ ಪ್ರತ್ಯಕ್ಷದರ್ಶಿಗಳಾಗಿರುತ್ತಾರೆ. ಈಗ ತಂದೆಯನ್ನೂ ಕೂಡ ಕರುಳ ಬಳ್ಳಿಯನ್ನು ಕತ್ತರಿಸಲು ಒಳಗೆ ಬಿಡುತ್ತಾರೆ. ಕೆಲವರು ಈ ವಿಸ್ಮಯಕಾರಿ ದೃಶ್ಯವನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಇದರ ತಪ್ಪು ಒಪ್ಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ನಾವು ನಿತ್ಯ ಓದುವ ಹೆಣ್ಣು ಭ್ರೂಣಗಳ ಹತ್ಯೆ, ಅನೈತಿಕ ಸಂಭಂಧಗಳಲ್ಲಿ ಜನಿಸಿದ ಹಾಲುಗಲ್ಲದ ಶಿಶುಗಳನ್ನು ತ್ಯಜಿಸಿ ಮಾಯವಾಗುವ ಹೆತ್ತ ಕರುಳು, ಶಿಶುಗಳ ಮಾರಾಟ, ಹೀಗೆ ನಾನಾ ರೀತಿಯ ಕೃತ್ಯಗಳು ನಿತ್ಯ ವಿಶ್ವಾದ್ಯಂತ ನಡೆಯುತ್ತಲೇ ಇರುತ್ತದೆ. ಇದು ನಮಗೆಲ್ಲರಿಗೂ ಕಲಿಸುವ ದೊಡ್ಡ ಪಾಠವೆಂದರೆ - ನಮಗೆ ನಮ್ಮ ಬಾಲ್ಯವನ್ನು ಕೊಟ್ಟು, ಅದನ್ನು ಪೂರ್ಣವಾಗಿ ಅನುಭವಿಸಲು ಸಹಕರಿಸಿದ ಎಲ್ಲಾ ಪಾತ್ರಧಾರಿಗಳಿಗೆ ನಾವು ಸದಾ ಋಣಿಯಾಗಿರಬೇಕು. ನಮ್ಮ ನೆರಳಾಗಿ ನಮ್ಮನ್ನು ಕಾಪಾಡುವ ತಂದೆ ತಾಯಂದಿರು, ಹತ್ತಿರದ ಸಂಬಂಧಿಗಳು ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತಾರೆ. ಇದರ ಅರಿವು ನಾವು ನಮ್ಮ ಮಕ್ಕಳನ್ನು ಬೆಳೆಯುವುದನ್ನು ನೋಡಿದಾಗ ಮಾತ್ರ ಅರಿವಾಗುತ್ತದೆ. ನಮಗೆ ನಮ್ಮ ಪ್ರಥಮ ನಗು, ಪ್ರಥಮ ಹೆಜ್ಜೆ, ಪ್ರಥಮ ಓಟ, ಪಾಠ ಯಾವುದೂ ನೆನಪಿರದೆ ಹೋದರೂ ಮನದ ಮೂಲೆಯಲ್ಲಿ ಅದು ಯ